ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬೆಂಗಳೂರು: ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4 ವರ್ಷದ ಬಾಲಕಿ ದಾರುಣ ಸಾವು; ತಾಯಿಯ ಕಣ್ಣೆದುರೇ ಉಸಿರು ಚೆಲ್ಲಿದ ಕಂದಮ್ಮ

Share News

ನೆಲಮಂಗಲ: ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಕ್ತಸಿಕ್ತ ದುರಂತವೊಂದು ಸಂಭವಿಸಿದೆ. ಹಬ್ಬ ಮುಗಿಸಿ ತಾಯಿಯ ಜೊತೆ ದೇವಸ್ಥಾನಕ್ಕೆ ತೆರಳುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲಾರಿ ಹರಿದು, ತಾಯಿಯ ಕಣ್ಣೆದುರೇ ಮಗು ಮೃತಪಟ್ಟ ಘಟನೆ ಹನುಮಂತೇಗೌಡನ ಪಾಳ್ಯದಲ್ಲಿ ಶನಿವಾರ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ನಿಶಿಕಾ (4) ಎಂದು ಗುರುತಿಸಲಾಗಿದೆ. ಈಕೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳಾಗಿದ್ದಳು.

ಯುಗಾದಿ ಹಬ್ಬ ಮುಗಿಸಿ ದೇವರ ದರ್ಶನ ಪಡೆಯಲು ತಾಯಿ ಲಾವಣ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೊರಟಿದ್ದರು. ಒಂದು ಮಗುವನ್ನು ಎತ್ತಿಕೊಂಡಿದ್ದ ಲಾವಣ್ಯ ಅವರು, ಮೊದಲ ಮಗಳು ನಿಶಿಕಾಳ ಕೈ ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಲಾರಿಯೊಂದು ಯಮನಂತೆ ನುಗ್ಗಿ ಏಕಾಏಕಿ ಪುಟ್ಟ ಬಾಲಕಿಯ ಮೇಲೆ ಹರಿದಿದೆ.

ಕಣ್ಣೆದುರೇ ಲಾರಿ ಮಗುವಿನ ಮೇಲೆ ಹರಿದ ದೃಶ್ಯ ಕಂಡು ತಾಯಿ ಲಾವಣ್ಯ ಅವರು ದಿಕ್ಕಾಪಾಲಾಗಿದ್ದಾರೆ. ಲಾರಿಯ ಚಕ್ರದಡಿ ಸಿಲುಕಿದ ಕಂದಮ್ಮ ತೀವ್ರವಾಗಿ ನರಳಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಹಬ್ಬದ ದಿನದಂದು ದೇವಸ್ಥಾನಕ್ಕೆ ಹೋಗುವ ಉತ್ಸಾಹದಲ್ಲಿದ್ದ ಪುಟ್ಟ ಬಾಲಕಿ ಹೀಗೆ ಅಕಾಲಿಕ ಮರಣಕ್ಕೀಡಾಗಿರುವುದು ಹೆತ್ತವರ ಮತ್ತು ಸ್ಥಳೀಯರ ಕರುಳು ಹಿಂಡುವಂತಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!