ಹುಣಸೂರಿನಲ್ಲಿ ಶೀಲ ಶಂಕಿಸಿ ಪತ್ನಿ, ಮಕ್ಕಳ ಮೇಲೆ ಲಾಂಗ್ನಿಂದ ಮಾರಣಾಂತಿಕ ಹಲ್ಲೆ: ಪತಿ ಪರಾರಿ

ಹುಣಸೂರು: ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿ ಪತಿಯೊಬ್ಬ ಆಕೆಯ ಮೇಲೆ ಹಾಗೂ ತಾಯಿಯ ರಕ್ಷಣೆಗೆ ಬಂದ ಮಕ್ಕಳ ಮೇಲೆಯೂ ಲಾಂಗ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಗರದ ರಜಾಕ್ ಮೊಹಲ್ಲಾದಲ್ಲಿ ನಡೆದಿದೆ.
ರಜಾಕ್ ಮೊಹಲ್ಲಾದ ನಿವಾಸಿ ಸಮಿವುಲ್ಲಾ ಎಂಬಾತನೇ ಈ ಕೃತ್ಯ ಎಸಗಿ ನಾಪತ್ತೆಯಾಗಿರುವ ಆರೋಪಿ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಸಮೀನಾಬಾನು, ಮಗ ಅಬ್ನಾನ್ ಷರೀಫ್ ಹಾಗೂ ಮಗಳನ್ನು ತಕ್ಷಣವೇ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಿ ಸಂಧಾನದ ಬೆನ್ನಲ್ಲೇ ಕೃತ್ಯ:
ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದ ಸಮಿವುಲ್ಲಾ ಹಾಗೂ ಸಮೀನಾಬಾನು ನಡುವೆ ಪತಿಯ ಶೀಲ ಶಂಕೆಯ ಗಲಾಟೆಯಿಂದಾಗಿ ಮನಸ್ತಾಪ ಉಂಟಾಗಿತ್ತು. ಕಿರುಕುಳ ತಾಳಲಾರದೆ ಸಮೀನಾಬಾನು ಒಂದು ತಿಂಗಳ ಹಿಂದೆ ಗುರುಪುರದಲ್ಲಿದ್ದ ತವರು ಮನೆಗೆ ತೆರಳಿದ್ದರು. ಬುಧವಾರ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿದ್ದರಿಂದ ಸಮೀನಾಬಾನು ಗಂಡನ ಮನೆಗೆ ವಾಪಸ್ ಬಂದಿದ್ದರು.
ಅಂದೇ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದ ವೇಳೆ ಮೊದಲೇ ಸಂಚು ರೂಪಿಸಿದ್ದ ಸಮಿವುಲ್ಲಾ, ಪತ್ನಿಯ ಮೇಲೆ ಲಾಂಗ್ನಿಂದ ದೈಹಿಕವಾಗಿ ಮರಣಾಂತಿಕ ದಾಳಿ ನಡೆಸಿದ್ದಾನೆ. ಈ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಕ್ಕಳ ಮೇಲೆಯೂ ಆತ ಹಲ್ಲೆ ನಡೆಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಮೀನಾಬಾನು ಅವರ ತಂದೆ ನೀಡಿದ ದೂರಿನ ಮೇರೆಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸಮಿವುಲ್ಲಾ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.



