ಪೊಲೀಸ್ ಪೇದೆಗೆ ಮಚ್ಚು ತೋರಿಸಿ ಹಲ್ಲೆಗೆ ಯತ್ನ!

ಚಿಕ್ಕಬಳ್ಳಾಪುರ :ಚಿಂತಾಮಣಿ ನಗರದ ಅತ್ಯಂತ ಜನನಿಬಿಡ ವಾಹನ ದಟ್ಟಣೆ ರಸ್ತೆಯಾದ ಬೆಂಗಳೂರು ಜೋಡಿ ರಸ್ತೆಯ ತಹಶೀಲ್ದಾರ್ ವೃತ್ತದಲ್ಲಿ ಮುಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಚಿಂತಾಮಣಿ ನಗರ ಠಾಣೆಯ ಪೊಲೀಸ್ ಪೇದೆಗೆ ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪೇದೆ ನೀಡಿದ ದೂರಿನ ಮೇಲೆ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾರ ಜಿಲ್ಲೆಯ ಚಿಂತಾಮಣಿ ನಗರ ಠಾಣೆಯ ಪೋಲೀಸ್ ಪೇದೆ ಸುನಿಲ್ ಕುಮಾರ್ ನೀಡಿದ ದೂರಿನ ಮೇಲೆ ಚಿಂತಾಮಣಿ ನಗರದ ವಾರ್ಡ್ ನಂ 4, ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ ಚಾಲಕ 37 ವರ್ಷದ ರಾಜೇಶ್ ಕುಮಾರ್ ರವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಠಾಣೆಯ ಪೋಲೀಸ್ ಪೇದೆ ಸುನಿಲ್ ಕುಮಾರ್ರವರನ್ನು ಠಾಣಾಧಿಕಾರಿಗಳು ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಪೀಟ್ ಜೂಜಾಟ,ಮಟ್ಕಾ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಶಾಲಾ ಕಾಲೇಜುಗಳ ಕಡೆಗಳಲ್ಲಿ ಹೆಣ್ಣು ಮಕ್ಕಳ ಹಿಂದೆ ಓಡಾಡುವ ಹುಡುಗರನ್ನು ಕರೆತರಲು ಸಾದಾ ಉಡುಪಿನಲ್ಲಿ ಹೋಗಲು ಸೂಚಿಸಿ ವಿಶೇಷ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದರು.
ಅದರಂತೆ ಠಾಣೆಯಿಂದ ತನ್ನ ಬೈಕ್ನಲ್ಲಿ ಹೋಗುತ್ತಿದ್ದ ಸುನಿಲ್ ಕುಮಾರ್ಗೆ ಬೆಂಗಳೂರು ಜೋಡಿ ರಸ್ತೆಯ ತಾಲ್ಲೂಕು ಕಛೇರಿಯ ವೃತ್ತದ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ನಗರದ ಟಿಪ್ಪುನಗರ ನಿವಾಸಿ 34 ವರ್ಷದ ಇಮ್ರಾನ್ ಎಂಬಾತ ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ಏಕಾಏಕಿ ಪೇದೆಯ ಬೈಕ್ಗೆ ಅಡ್ಡಬಂದಿದ್ದಾನೆ,
ಅಡ್ಡ ಬಂದ ಆತನಿಗೆ ಪೊಲೀಸ್ ಪೇದೆ ವಾಹನ ನಿಲ್ಲಿಸಿ ಅಪಘಾತಗಳು ಹೆಚ್ಚಾಗುತ್ತಿದೆ ನಿದಾನವಾಗಿ ಹೋಗುವಂತೆ ಸೂಕ್ತ ತಿಳುವಳಿಕೆ ಹೇಳುತ್ತಿದ್ದಾಗ ಅದೇ ಸಮಯಕ್ಕೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಅದೇ ಸ್ಥಳಕ್ಕೆ ಬಂದ ನಗರದ ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ ರಾಜೇಶ್ ಕುಮಾರ್ ಎಂಬಾತ ಅಲ್ಲಿಗೆ ಬಂದವನು ಇಮ್ರಾನ್ಗೆ ಬುದ್ದಿವಾದ ಹೇಳುತ್ತಿದ್ದ ಪೊಲೀಸ್ ಪೇದೆ ವಿರುದ್ದ ತಿರುಗಿಬಿದ್ದಿದ್ದಾನೆ.
ನಗರ ಠಾಣೆಯ ಪೊಲೀಸ್ ಅಂತ ಹೇಳಿದರು ರಾಜೇಶ್ ಕುಮಾರ್ ಪೇದೆಗೆ ಧಮಕಿ ಹಾಕಿದಲ್ಲದೆ ಅವ್ಯಾಚ್ಯ ಶಬ್ದಗಳಿಂದ ಬೈದಿದಲ್ಲದೆ ಸದರಿ ವೃತ್ತದಲ್ಲಿ ಎಳೆ ನೀರು ಮಾರುತ್ತಿದ್ದ ವ್ಯಕ್ತಿ ಎಳನೀರು ಕಾಯಿಗಳ ಮೇಲೆ ಇಟ್ಟಿದ್ದ ಮಚ್ಚನ್ನು ಎತ್ತಿಕೊಂಡು ಮುಚ್ಚಿನಿಂದ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ.
ಕೊಲೆ ಬೆದರಿಕೆ ಹಾಕಿದ ಮತ್ತು ಕರ್ತವ್ಯಕ್ಕೆ ಅಡ್ಡಪಡಿಸಿದ ಬಗ್ಗೆ ಪೇದೆ ಸುನಿಲ್ ಕುಮಾರ್ ನೀಡಿದ ದೂರಿನ ಮೇಲೆ ನಗರಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿದಲ್ಲದೆ, ಸದರಿ ವೃತ್ತದಲ್ಲಿ ನಗರಠಾಣೆಯ ಪೊಲೀಸರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಮಚ್ಚು ತೋರಿಸಿ ಬೆದರಿಕೆ ಹಾಕಿದ ವಿಡಿಯೋಗಳು ಸಂಗ್ರಹಿಸಿಕೊಂಡು ಅರೋಪಿ ರಾಜೇಶ್ ಕುಮಾರ್ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಜಿಲ್ಲಾ ವರದಿಗಾರರು ಚಿಕ್ಕಬಳ್ಳಾಪುರ



