ಕಮಲನಗರ ಕಳ್ಳತನ ಪ್ರಕರಣ: ಎಐ ಕ್ಯಾಮೆರಾ ನೆರವಿನಿಂದ ಮೂವರು ಆರೋಪಿಗಳ ಬಂಧನ, 31.87 ಲಕ್ಷ ಮೌಲ್ಯದ ಸ್ವತ್ತು ವಶ

ಬೀದರ್: ಜಿಲ್ಲೆಯ ಕಮಲನಗರ ಗ್ರಾಮದಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 31,87,500 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಮತ್ತು ಕಾರನ್ನು ಜಪ್ತಿ ಮಾಡಿದ್ದಾರೆ.
ದಿನಾಂಕ 10/03/2026 ರಂದು ಮದನೂರ ನಿವಾಸಿ ಶ್ರೀ ರಾಜಕುಮಾರ ಅಣ್ಣಾರಾವ ಪಾಟೀಲ ಅವರು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಿನಾಂಕ 09/03/2026 ರ ರಾತ್ರಿ ಎಪಿಎಂಸಿ ಮಾರ್ಕೆಟ್ ಹತ್ತಿರವಿರುವ ತಮ್ಮ ಮನೆಯ ಬೀಗ ಮುರಿದು ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ 320 ಗ್ರಾಂ ಚಿನ್ನ, 690 ಗ್ರಾಂ ಬೆಳ್ಳಿ ಹಾಗೂ 1 ಲಕ್ಷ ರೂ. ನಗದು ಹಣವನ್ನು ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಕಮಲನಗರ ಠಾಣೆಯಲ್ಲಿ ಗುನ್ನೆ ನಂ: 22/2026, ಕಲಂ 305, 331(4) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರದೀಪ್ ಗುಂಟಿ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಚಂದ್ರಕಾಂತ ಪೂಜಾರಿ ಹಾಗೂ ಭಾಲ್ಕಿ ಡಿವೈಎಸ್ಪಿ ಶ್ರೀ ಶಿವಾನಂದ ಪವಾಡಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಕಮಲನಗರ ಸಿಪಿಐ ಶ್ರೀಕಾಂತ ವಿ. ಅಲ್ಲಾಪೂರ, ಪಿಎಸ್ಐ ಶ್ರೀಮತಿ ಆಶಾ ಮತ್ತು ತಂಡವು ತನಿಖೆ ಕೈಗೊಂಡಾಗ, ಬಸ್ ಸ್ಟ್ಯಾಂಡ್ ಬಳಿ ಅಳವಡಿಸಲಾಗಿದ್ದ ಎಐ (AI) ಕ್ಯಾಮೆರಾದಲ್ಲಿ ಸಂಶಯಾಸ್ಪದ ಕಾರೊಂದು ಪತ್ತೆಯಾಗಿತ್ತು. ಸಿಸಿಟಿವಿ ಕಮಾಂಡ್ ಸೆಂಟರ್ ಮತ್ತು ಸಿಡಿಆರ್ ವಿಭಾಗದ ತಾಂತ್ರಿಕ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ:
ಚಿನ್ನದ ಆಭರಣಗಳು: 320 ಗ್ರಾಂ (ಮೌಲ್ಯ ₹25,60,000)
ಬೆಳ್ಳಿ ಆಭರಣ/ವಸ್ತುಗಳು: 690 ಗ್ರಾಂ (ಮೌಲ್ಯ ₹1,72,500)
ನಗದು: ₹5,000
ವಾಹನ: ಕೃತ್ಯಕ್ಕೆ ಬಳಸಿದ ಟಾಟಾ ವಿಸ್ಟಾ ಕಾರು (ಮೌಲ್ಯ ₹4,50,000)
ಒಟ್ಟು ಮೌಲ್ಯ: ₹31,87,500
ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹಿಡಿದ ಕಮಲನಗರ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



