ಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿ

ಸರ್ಕಾರಿ ಶಾಲೆಗಳ ವಿಲೀನಕ್ಕೆ ಆಕ್ರೋಶ: ಪೋಷಕರಿಗೆ ‘ಟಿಸಿ’ ನೀಡಲು ಬಿಇಒ ಆದೇಶ

Share News

ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆ (KPS) ವ್ಯಾಪ್ತಿಯ ಏಳು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ‘ಮ್ಯಾಗ್ನೆಟಿಕ್ ಶಾಲಾ ಯೋಜನೆ’ಯಡಿ ವಿಲೀನಗೊಳಿಸುವ ನಿರ್ಧಾರವು ಪೋಷಕರು ಮತ್ತು ಶಿಕ್ಷಣ ಹೋರಾಟಗಾರರ ಪ್ರತಿರೋಧಕ್ಕೆ ಗುರಿಯಾಗಿದೆ.

ಹೊಂಗನೂರು ಕೆಪಿಎಸ್ ಮ್ಯಾಗ್ನೆಟಿಕ್ ಶಾಲೆಗೆ ಏಳು ಸಣ್ಣ ಶಾಲೆಗಳನ್ನು ಸೇರಿಸಲಾಗಿದೆ. ಆದರೆ, ಐದು ಶಾಲೆಗಳ ವಿದ್ಯಾರ್ಥಿಗಳು ಹೊಸ ಶಾಲೆಗೆ ಬರಲು ನಿರಾಕರಿಸುತ್ತಿದ್ದಾರೆ.

ಮ್ಯಾಗ್ನೆಟಿಕ್ ಶಾಲೆಗೆ ಬಾರದ ವಿದ್ಯಾರ್ಥಿಗಳ ಪೋಷಕರಿಗೆ ಕೂಡಲೇ ವರ್ಗಾವಣೆ ಪತ್ರ (TC) ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಸಂಬಂಧಪಟ್ಟ ಶಾಲಾ ಶಿಕ್ಷಕರಿಗೆ ಸೂಚಿಸಿದ್ದಾರೆ.

ಪೋಷಕರ ಮನವೊಲಿಸುವಲ್ಲಿ ವಿಫಲರಾಗಿರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಾರ್ಚ್ 11ರ ಗಡುವಿನೊಂದಿಗೆ ಆದೇಶ ಹೊರಡಿಸಲಾಗಿದೆ.

ಈ ಆದೇಶವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (AIDSO) ಬಲವಾಗಿ ಖಂಡಿಸಿದೆ. ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಸರ್ಕಾರದ ಈ ಕ್ರಮದ ಬಗ್ಗೆ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:

ಸರ್ಕಾರದ ಈ ಧೋರಣೆಯು ಬಡವರ ಶಿಕ್ಷಣ ವಿರೋಧಿಯಾಗಿದೆ. ಪೋಷಕರ ನ್ಯಾಯಯುತ ಬೇಡಿಕೆಯನ್ನು ಆಲಿಸುವ ಬದಲು, ಬಲವಂತವಾಗಿ ಟಿಸಿ ನೀಡುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಕೂಡಲೇ ವಿಲೀನ ಪ್ರಕ್ರಿಯೆ ಕೈಬಿಟ್ಟು ಹಳ್ಳಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ನೀಡಬೇಕು.

ಸರ್ಕಾರವು ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಪೋಷಕರು ಮತ್ತು ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ. ಈ ‘ಮ್ಯಾಗ್ನೆಟಿಕ್ ಶಾಲೆ’ ಪ್ರಯೋಗವು ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ವರದಿ :- ಆಂಟೋನಿ ಪತ್ರಕರ್ತ


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!