ನೌಕಾಪಡೆಯ ರಹಸ್ಯ ಸೋರಿಕೆ: ಐಎಸ್ಐ ಏಜೆಂಟ್ಗೆ ಮಾಹಿತಿ ನೀಡುತ್ತಿದ್ದ ಅಧಿಕಾರಿಯ ಬಂಧನ

ಭಾರತೀಯ ನೌಕಾಪಡೆಯಲ್ಲಿದ್ದುಕೊಂಡೇ ದೇಶದ ಭದ್ರತೆಗೆ ಕುತ್ತು ತರುತ್ತಿದ್ದ ಕಪ್ಪುಚುಕ್ಕೆಯೊಂದನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಪತ್ತೆಹಚ್ಚಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ನೌಕಾಪಡೆಯ ಅಧಿಕಾರಿ ಆದರ್ಶ್ ಕುಮಾರ್ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿದೆ.ಬಂಧಿತ ವ್ಯಕ್ತಿಯನ್ನು ಆಗ್ರಾ ಮೂಲದ ‘ಲ್ಯಾನ್ಸ್ ನಾಯಕ್’ ಆದರ್ಶ್ ಕುಮಾರ್ (ಅಲಿಯಾಸ್ ಲಕ್ಕಿ) ಎಂದು ಗುರುತಿಸಲಾಗಿದೆ. ಈತ ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು.
ಆದರ್ಶ್ ಕುಮಾರ್ ಪಾಕಿಸ್ತಾನಿ ಏಜೆಂಟ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕ ತಕ್ಷಣ, ಎಟಿಎಸ್ ಅಧಿಕಾರಿಗಳು ಎಲೆಕ್ಟ್ರಾನಿಕ್ ಮತ್ತು ಭೌತಿಕ ಕಣ್ಗಾವಲು ನಡೆಸಿ ಆತನನ್ನು ಬಲೆಗೆ ಕೆಡವಿದ್ದಾರೆ.
ತನಿಖೆಯ ವೇಳೆ ಆತ ಯುದ್ಧನೌಕೆಗಳು ಸೇರಿದಂತೆ ನೌಕಾಪಡೆಯ ಅತ್ಯಂತ ಸೂಕ್ಷ್ಮ ಮತ್ತು ಕಾರ್ಯತಂತ್ರದ ಫೋಟೋಗಳನ್ನು ಪಾಕಿಸ್ತಾನಿ ಏಜೆಂಟ್ಗಳಿಗೆ ರವಾನಿಸಿರುವುದು ಬೆಳಕಿಗೆ ಬಂದಿದೆ.
ಕೇವಲ ಮಾಹಿತಿ ಹಂಚಿಕೊಳ್ಳುವುದು ಮಾತ್ರವಲ್ಲದೆ, ಬ್ಯಾಂಕ್ ಖಾತೆಗಳ ಮೂಲಕ ಸಂಶಯಾಸ್ಪದ ಹಣಕಾಸು ವರ್ಗಾವಣೆ ನಡೆಸಿರುವುದು ಕೂಡ ದೃಢಪಟ್ಟಿದೆ.
ದೇಶದ ರಕ್ಷಣಾ ಪಡೆಗಳಲ್ಲಿದ್ದುಕೊಂಡು ಶತ್ರು ರಾಷ್ಟ್ರಕ್ಕೆ ಮಾಹಿತಿ ನೀಡುವುದು ಅತ್ಯಂತ ಗಂಭೀರ ಅಪರಾಧ. ಆದರ್ಶ್ ಕುಮಾರ್ ನೀಡಿದ ಮಾಹಿತಿಯಿಂದ ದೇಶದ ನೌಕಾ ಭದ್ರತೆಗೆ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಹೆಚ್ಚಿನ ತನಿಖೆ ನಡೆಸುತ್ತಿವೆ.
ವರದಿ :- ಆಂಟೋನಿ ಪತ್ರಕರ್ತ



