ತುಮಕೂರು: ಲಂಚದ ಆಸೆಗೆ ಬಿದ್ದ ವೈದ್ಯೆ ಲೋಕಾಯುಕ್ತ ಬಲೆಗೆ!

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲು ಹೋಗಿ ನೇತ್ರ ತಜ್ಞೆಯೊಬ್ಬರು ಈಗ ಕಂಬಿ ಎಣಿಸುವಂತಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ ವೈದ್ಯೆ ಡಾ. ಸವಿತಾ ಹಾಗೂ ಅವರ ಸಹಚರ ಸಿಬ್ಬಂದಿ ಈಗ ಲೋಕಾಯುಕ್ತರ ಅತಿಥಿಗಳಾಗಿದ್ದಾರೆ.
ಉಪ್ಪಾರಹಳ್ಳಿಯ ನಿವಾಸಿ ಅವಿನಾಶ್ ಎಂಬುವವರು ತಮ್ಮ ತಾಯಿಯ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಕಣ್ಣಿಗೆ ಲೆನ್ಸ್ ಅಳವಡಿಸಲು ವೈದ್ಯೆ ಡಾ. ಸವಿತಾ ಅವರು 6,000 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗಬೇಕಾದ ಸೌಲಭ್ಯಕ್ಕೆ ಹಣ ಕೇಳಿದ್ದರಿಂದ ಬೇಸತ್ತ ಅವಿನಾಶ್, ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.
ಲೋಕಾಯುಕ್ತರ ಯೋಜನೆಯಂತೆ, ನಿನ್ನೆ ಮಧ್ಯಾಹ್ನ ಅವಿನಾಶ್ ಅವರು ವೈದ್ಯೆಗೆ ಹಣ ನೀಡಲು ಹೋದಾಗ:
ವೈದ್ಯೆ ನೇರವಾಗಿ ಹಣ ಪಡೆಯದೆ, ಆಸ್ಪತ್ರೆಯ ಸಿಬ್ಬಂದಿ ಮನೋಜ್ ಮೂಲಕ ಹಣ ಪಡೆಯಲು ಸೂಚಿಸಿದರು.
ಹಣವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಹೊಂಚು ಹಾಕಿದ್ದ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ಡಿವೈಎಸ್ಪಿ ಮಂಜುನಾಥ್ ನೇತೃತ್ವದ ತಂಡ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದೆ.
ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಇರಬೇಕಾದ ಕಡೆ ಇಂತಹ ಭ್ರಷ್ಟಾಚಾರ ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ :- ಆಂಟೋನಿ ಪತ್ರಕರ್ತ



