ಬೆಂಗಳೂರು: ಹಿರಿಯ ನಟ ದ್ವಾರಕೀಶ್ ಸೊಸೆ ‘ವರ್ಷಾ ರೈ’ ವಿರುದ್ಧ ವಂಚನೆ ಆರೋಪ – ಬೀದಿಯಲ್ಲೇ ಹಲ್ಲೆ ನಡೆಸಿದ ದೃಶ್ಯ ವೈರಲ್!

ಕನ್ನಡ ಚಿತ್ರರಂಗದ ದಿಗ್ಗಜ ನಟ ದ್ವಾರಕೀಶ್ ಅವರ ಕುಟುಂಬಕ್ಕೆ ಮುಜುಗರ ತರುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ದ್ವಾರಕೀಶ್ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ ವಿರುದ್ಧ ಹಣಕಾಸಿನ ವಂಚನೆ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪಗಳು ಕೇಳಿಬಂದಿವೆ.
ತಮ್ಮ ಬಳಿ ಹಣಕಾಸಿನ ವ್ಯವಹಾರ ನಡೆಸಿದ್ದ ರಮಣ ರೆಡ್ಡಿ ಎಂಬುವವರು ತಾವು ನೀಡಿದ್ದ 6 ಲಕ್ಷ ರೂಪಾಯಿ ಹಣವನ್ನು ವಾಪಸ್ ಕೇಳಲು ವರ್ಷಾ ರೈ ಅವರ ಬಳಿ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ವರ್ಷಾ ರೈ ಅವರು ಬೀದಿಯಲ್ಲೇ ರಮಣ ರೆಡ್ಡಿ ಅವರ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದ್ದಾರೆ. ಈ ಇಡೀ ಗಲಾಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವರ್ಷಾ ರೈ ಅವರ ವಿರುದ್ಧ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಿಗೆ ಹತ್ತಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ್ದಾರೆ. ಅವರ ಮೇಲಿರುವ ಪ್ರಮುಖ ಆರೋಪಗಳ ಪಟ್ಟಿ ಇಲ್ಲಿದೆ:
ಚೀಟಿ ವ್ಯವಹಾರ: ಚೀಟಿ ಹಾಕುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದಾರೆ.
ಆಭರಣ ವಂಚನೆ: ಸುಮಾರು 110 ಗ್ರಾಂ ಚಿನ್ನಾಭರಣ ಪಡೆದು ಅದನ್ನು ವಾಪಸ್ ನೀಡದೆ ವಂಚಿಸಿರುವ ದೂರು ದಾಖಲಾಗಿದೆ.
ಸಣ್ಣ ಹೂಡಿಕೆದಾರರಿಗೆ ಪಂಗನಾಮ: ದಿನಸಿ ಅಂಗಡಿಗಳಿಗೆ ಬರುವವರೊಂದಿಗೆ ಆತ್ಮೀಯತೆ ಬೆಳೆಸಿ, ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ ಸಾವಿರಾರು ರೂಪಾಯಿ ಹಣ ಪಡೆದಿದ್ದಾರೆ.
ಸಂತ್ರಸ್ತರ ಪ್ರಕಾರ, ಹಣ ಕೇಳಲು ಹೋದರೆ ವರ್ಷಾ ರೈ ಅವರು ರೌಡಿಸಂ ಮಾಡುತ್ತಾರೆ ಮತ್ತು ಪೊಲೀಸರಿಗೆ ಸುಳ್ಳು ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎನ್ನಲಾಗಿದೆ.
ಈಗಾಗಲೇ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ವರ್ಷಾ ರೈ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
ಹಿರಿಯ ನಟನ ಹೆಸರನ್ನು ಬಳಸಿಕೊಂಡು ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ :- ಆಂಟೋನಿ ಪತ್ರಕರ್ತ



