ತಡಸದಲ್ಲಿ ಗುಂಡಿಬಿದ್ದ ರಸ್ತೆಗೆ ಸ್ಪಂದನೆ: ಕರವೇ ಪ್ರತಿಭಟನೆ ಬೆನ್ನಲ್ಲೇ ಹೆದ್ದಾರಿ ಗುಂಡಿ ಮುಚ್ಚಿದ ಅಧಿಕಾರಿಗಳು!

ಶಿಗ್ಗಾವಿ: ತಾಲೂಕಿನ ತಡಸ ಗ್ರಾಮದ ಮೂಲಕ ಹಾದುಹೋಗುವ ಹುಬ್ಬಳ್ಳಿ–ಶಿರಸಿ ರಸ್ತೆಯಲ್ಲಿ ಬಿದ್ದಿದ್ದ ತೆಗ್ಗು-ಗುಂಡಿಗಳಿಂದ ವಾಹನ ಸವಾರರು ಎದುರಿಸುತ್ತಿದ್ದ ತೊಂದರೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ತೀವ್ರ ಪ್ರತಿಭಟನೆಯ ಫಲವಾಗಿ ಲೋಕೋಪಯೋಗಿ (PWD) ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಬೃಹತ್ ಗುಂಡಿಗಳು ಬಿದ್ದು ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಕರವೇ ಸ್ವಾಭಿಮಾನಿ ಬಳಗದ ಶಿಗ್ಗಾವಿ ತಾಲೂಕು ಅಧ್ಯಕ್ಷ ಶಂಕರ ಬಡಗೇರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆಯಲ್ಲೇ ಧರಣಿ ನಡೆಸಿ, ಪಿಡಬ್ಲ್ಯುಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ತ್ವರಿತ ಸ್ಪಂದನೆ – ಪೂರ್ಣ ರಸ್ತೆ ಅಭಿವೃದ್ಧಿಯ ಭರವಸೆ:
ಕರವೇ ಸಂಘಟನೆಯ ಪ್ರತಿಭಟನೆಗೆ ತಕ್ಷಣವೇ ಸ್ಪಂದಿಸಿದ ಪಿಡಬ್ಲ್ಯುಡಿ ಅಧಿಕಾರಿಗಳು, ಸ್ಥಳದಲ್ಲೇ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ–ಶಿರಸಿ ರಸ್ತೆಯ ಸಂಪೂರ್ಣ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಜನಪರ ಹೋರಾಟಕ್ಕೆ ಸಂದ ಜಯ: ಯಲ್ಲಪ್ಪ ಮರಾಠೆ
ಈ ಕುರಿತು ಕರವೇ ಸ್ವಾಭಿಮಾನಿ ಬಳಗದ ಹಾವೇರಿ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿ, “ಜನರು, ರೈತರು ಹಾಗೂ ನೊಂದವರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿರುವ ತಾಲೂಕು ಅಧ್ಯಕ್ಷ ಶಂಕರ ಬಡಗೇರ ಮತ್ತು ಕಾರ್ಯಕರ್ತರ ಶ್ರಮ ಶ್ಲಾಘನೀಯ. ಸ್ಥಳೀಯರ ಮನವಿಗೆ ಸ್ಪಂದಿಸಿ ತಕ್ಷಣ ರಸ್ತೆ ದುರಸ್ತಿ ಮಾಡಿದ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಅಭಿನಂದನೆಗಳು,” ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿಯೂ ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಯುವ ಎಲ್ಲಾ ಹೋರಾಟಗಳಿಗೆ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಪುನರುಚ್ಚರಿಸಿದರು.



