ಮಂಡ್ಯ ಜೈಲಿನ ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ಪ್ರಕರಣ: ಕಾರಾಗೃಹ ಅಧೀಕ್ಷಕಿ ಶಾಂತಮ್ಮ ಎತ್ತಂಗಡಿ, ಬಳ್ಳಾರಿಗೆ ವರ್ಗಾವಣೆ!

ಮಂಡ್ಯ : ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ನೀಡಿದ ಹಾಗೂ ಜೈಲು ಕೊಠಡಿಗಳಿಗೆ ದರ ನಿಗದಿಪಡಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಕಾರಾಗೃಹ ಅಧೀಕ್ಷಕಿ ಶಾಂತಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನಾಧರಿಸಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ ಹಾಗೂ ಮುಖ್ಯಾಂಶಗಳು:
ಅಕ್ರಮ ಆಸ್ಪತ್ರೆ ದಾಖಲಾತಿ: ಭೂ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿದ್ದ ಎಡಿಎಲ್ಆರ್ (ADLR) ಅಧಿಕಾರಿ ಮಹಮದ್ ಹುಸೇನ್, ಯಾವುದೇ ಗಂಭೀರ ಕಾಯಿಲೆ ಇಲ್ಲದಿದ್ದರೂ ಬೆನ್ನು ನೋವಿನ ನೆಪವೊಡ್ಡಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಾಗಿದ್ದನು.
ಆಸ್ಪತ್ರೆಯಲ್ಲಿ ರಾಜಾತಿಥ್ಯ: ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಗೆ ಶಿಫ್ಟ್ ಆಗಿದ್ದ ಖೈದಿ ಹುಸೇನ್, ಆಸ್ಪತ್ರೆಯಲ್ಲೇ ತನ್ನ ಗೆಳತಿಯೊಂದಿಗೆ ಇದ್ದದ್ದು ಮಂಡ್ಯ ಜಿಲ್ಲಾ ಸತ್ರ ನ್ಯಾಯಾಧೀಶರ ದಿಢೀರ್ ಭೇಟಿ ವೇಳೆ ಬಯಲಿಗೆ ಬಂದಿತ್ತು.
ನ್ಯಾಯಾಧೀಶರ ತರಾಟೆ: ಈ ಅಕ್ರಮವನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದ ಜಿಲ್ಲಾ ಸತ್ರ ನ್ಯಾಯಮೂರ್ತಿ ಸಿ. ಚಂದ್ರಶೇಖರ್ ಅವರು ಜೈಲು ಅಧೀಕ್ಷಕಿ ಶಾಂತಮ್ಮ ಅವರಿಗೆ ಸ್ಥಳದಲ್ಲೇ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು.
ಸೆಲ್ ರೇಟ್ ಆರೋಪ & ಮಾಧ್ಯಮಗಳ ವರದಿ: ಈ ಘಟನೆಯ ಬೆನ್ನಲ್ಲೇ ಜೈಲಿನಲ್ಲಿ ಕೊಠಡಿ (ಸೆಲ್) ಪಡೆಯಲು ದರ ನಿಗದಿಪಡಿಸಲಾಗಿದೆ (ರೇಟ್ ಫಿಕ್ಸ್) ಎಂಬ ಸತ್ಯಾಸತ್ಯತೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಮಾಧ್ಯಮಗಳ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾರಾಗೃಹ ಇಲಾಖೆ ಉನ್ನತಾಧಿಕಾರಿಗಳು, ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಅವರನ್ನು ಎತ್ತಂಗಡಿ ಮಾಡಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾಯಿಸುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.



