ಮಡಿಕೇರಿ ಜಿಲ್ಲಾಸ್ಪತ್ರೆಯ ಬೇಜವಾಬ್ದಾರಿತನ: ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳ ಜೀವದ ಜೊತೆ ಚೆಲ್ಲಾಟ
ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ತುರ್ತು ಪರಿಸ್ಥಿತಿಯಲ್ಲಿ ಬರುವ ರೋಗಿಗಳಿಗೆ ಕನಿಷ್ಠ ಸುರಕ್ಷತೆಯೂ ಇಲ್ಲದಂತಾಗಿದೆ. ಇತ್ತೀಚೆಗೆ ಸಂಭವಿಸಿದ ಬೈಕ್ ಅಪಘಾತದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಆಘಾತಕಾರಿ ವಾಸ್ತವ ಬೆಳಕಿಗೆ ಬಂದಿದೆ.
ವೈದ್ಯರ ಅಲಭ್ಯತೆ: ಭಾನುವಾರದಂದು ಆಸ್ಪತ್ರೆಯಲ್ಲಿ ಯಾವುದೇ ಅನುಭವವಿರುವ ವೈದ್ಯರಾಗಲಿ ಅಥವಾ ಹಿರಿಯ ನರ್ಸ್ಗಳಾಗಲಿ ಕರ್ತವ್ಯದಲ್ಲಿ ಇರುವುದಿಲ್ಲ. ಬದಲಿಗೆ ಕೇವಲ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೇ ರೋಗಿಗಳನ್ನು ನೋಡಿಕೊಳ್ಳುತ್ತಿರುವುದು ಕಂಡುಬಂದಿದೆ.
ವಿದ್ಯಾರ್ಥಿಗಳಿಂದ ಚಿಕಿತ್ಸೆ: ಅಪಘಾತದಂತಹ ಗಂಭೀರ ಸಂದರ್ಭದಲ್ಲಿಯೂ ನುರಿತ ವೈದ್ಯರಿಲ್ಲದೆ, ಕೇವಲ ಫೋನ್ ಕರೆಗಳ ಮೂಲಕ ಸೂಚನೆ ಪಡೆದು ವಿದ್ಯಾರ್ಥಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಗಾಯಾಳುಗಳಿಗೆ ಡ್ರೆಸಿಂಗ್ ಮಾಡುವಾಗ ಸಿಬ್ಬಂದಿಯ ಕೈಗಳು ನಡುಗುತ್ತಿದ್ದುದು ಅವರಲ್ಲಿನ ಅನುಭವದ ಕೊರತೆಯನ್ನು ಎತ್ತಿ ತೋರಿಸುತ್ತಿತ್ತು.
ಖಾಸಗಿ ಕ್ಲಿನಿಕ್ಗಳ ಹಾವಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ತಮ್ಮ ಸ್ವಂತ ಕ್ಲಿನಿಕ್ಗಳಲ್ಲಿ ಬಿಜಿಯಾಗಿದ್ದು, ಸರ್ಕಾರಿ ಆಸ್ಪತ್ರೆಯನ್ನು ಕೇವಲ ವಿದ್ಯಾರ್ಥಿಗಳ ಭರವಸೆಗೆ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರೋಗಿಗಳ ಸುರಕ್ಷತೆಗೆ ಭೀತಿ: ತುರ್ತು ಪರಿಸ್ಥಿತಿಯಲ್ಲಿ ಬರುವ ರೋಗಿಗಳು ಜಿಲ್ಲಾ ಆಸ್ಪತ್ರೆಯನ್ನು ನಂಬಿ ಬರುತ್ತಾರೆ. ಆದರೆ ಅಲ್ಲಿ ನುರಿತ ಸಿಬ್ಬಂದಿ ಇಲ್ಲದಿರುವುದು ಜನರ ಜೀವಕ್ಕೆ ಸಂಚಕಾರ ತರುವಂತಿದೆ.
ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಗಮನಹರಿಸಬೇಕು. ಭಾನುವಾರ ಸೇರಿದಂತೆ ರಜಾ ದಿನಗಳಲ್ಲೂ ಅನುಭವವಿರುವ ವೈದ್ಯರು ಮತ್ತು ನರ್ಸ್ಗಳು ಕಡ್ಡಾಯವಾಗಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಸಂಬಳ ಪಡೆದು ಖಾಸಗಿ ಪ್ರಾಕ್ಟೀಸ್ನಲ್ಲಿ ತೊಡಗಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
“ಸಾಮಾನ್ಯ ಜನರ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ, ಜಿಲ್ಲಾಸ್ಪತ್ರೆಯ ಘನತೆಯನ್ನು ಕಾಪಾಡಿ” ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ : ಆಂಟೋನಿ ಪತ್ರಕರ್ತ




