ಮಗುವಿನ ಮುಖ ನೋಡುವ ಮುನ್ನವೇ ವಿಧಿಯಾಟ: ಬೆಸ್ಕಾಂ ಲೈನ್ಮ್ಯಾನ್ ದುರಂತ ಅಂತ್ಯ

ತುಮಕೂರು: ಒಂದು ಕಡೆ ಹೊಸ ಜೀವದ ಆಗಮನದ ಸಂಭ್ರಮ, ಮತ್ತೊಂದು ಕಡೆ ಮನೆಗೆ ಆಧಾರವಾಗಿದ್ದ ಜೀವದ ನಿರ್ಗಮನ. ವಿಧಿಯ ಕ್ರೂರ ಆಟಕ್ಕೆ ಬೆಸ್ಕಾಂ ಲೈನ್ಮ್ಯಾನ್ ಒಬ್ಬರು ಬಲಿಯಾಗಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ.
ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಅಳವಡಿಸುವ ಕಾಯಕದಲ್ಲಿ ನಿರತರಾಗಿದ್ದ ಕೆ.ಪಿ. ಮನು (26) ಅವರು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಸರಿಯಾದ ‘ಲೈನ್ ಕ್ಲಿಯರೆನ್ಸ್’ ನೀಡದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.
ಮೃತ ಮನು ಅವರ ಬದುಕು ಈಗ ಎಲ್ಲರ ಎದೆ ಸೀಳುವಂತಿದೆ. ಮದುವೆಯಾಗಿ ಕೇವಲ ಹತ್ತು ತಿಂಗಳಾಗಿತ್ತು. ಅತಿ ಮುಖ್ಯವಾದ ಸಂಗತಿಯೆಂದರೆ, ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಸರಿಯಾಗಿ ಇಂದೇ ಅವರಿಗೆ ಹೆರಿಗೆಯ ದಿನಾಂಕ (Delivery Date) ನಿಗದಿಯಾಗಿತ್ತು. * ಕನಸು: ತನ್ನ ಮಗುವನ್ನು ಎತ್ತಿ ಮುದ್ದಾಡಬೇಕೆಂಬ ಹಂಬಲದಲ್ಲಿದ್ದ ತಂದೆ.
ಮಗುವಿನ ಅಳು ಕೇಳುವ ಮುನ್ನವೇ ತಂದೆಯ ಉಸಿರು ನಿಂತಿದೆ.ಪತ್ನಿ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಲ್ಲಿದ್ದರೆ, ಇತ್ತ ಪತಿ ಹೆಣವಾಗಿ ಮನೆ ಸೇರಿದ್ದಾರೆ.
ಕೆಲಸದ ಅವಧಿಯಲ್ಲಿ ಸಿಬ್ಬಂದಿಯ ಸುರಕ್ಷತೆಗೆ ಬೆಲೆ ಇಲ್ಲವೇ?” ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಲೈನ್ ಕಟ್ ಮಾಡದೆ ಕೆಲಸಕ್ಕೆ ಹಚ್ಚಿದ್ದೇ ಈ ಸಾವಿಗೆ ನೇರ ಕಾರಣ ಎಂದು ಮನು ಅವರ ಕುಟುಂಬಸ್ಥರು ಹಾಗೂ ಕಲ್ಲುಶೆಟ್ಟಿಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ನಿರ್ಲಕ್ಷ್ಯವು ಒಂದು ಸುಂದರ ಕುಟುಂಬವನ್ನು ಬೀದಿಗೆ ತಂದಿದೆ. ಕರ್ತವ್ಯ ನಿರತ ಸಿಬ್ಬಂದಿಗಳ ಸುರಕ್ಷತೆ ಆದ್ಯತೆಯಾಗಲಿ.
ವರದಿ :- ಆಂಟೋನಿ ಪತ್ರಕರ್ತ



