ಹುಬ್ಬಳ್ಳಿ: ಬಿಸಿಲ ತಾಪಕ್ಕೆ ತಂಪು ಹುಡುಕಲು ಹೋದ ಇಬ್ಬರು ವಿದ್ಯಾರ್ಥಿಗಳು ಜಲಸಮಾಧಿ; ಸಾವಿನಲ್ಲೂ ಒಂದಾದ ಆಪ್ತ ಗೆಳೆಯರು!

ಹುಬ್ಬಳ್ಳಿ: ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈಜಲು ಹೋದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಬೈರಿದೇವರಕೊಪ್ಪ ಸಮೀಪದ ರೇಣುಕಾ ನಗರದಲ್ಲಿ ನಡೆದಿದೆ.
ಅಕ್ಕಪಕ್ಕದ ಮನೆಯವರೂ ಹಾಗೂ ಆಪ್ತ ಗೆಳೆಯರೂ ಆಗಿದ್ದ ಸಮರ್ಥ್ ಮತ್ತು ಹರೀಶ್ (17) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಮನೆಗೆ ಆಧಾರವಾಗಿದ್ದ ಏಕೈಕ ಗಂಡು ಮಕ್ಕಳಾಗಿದ್ದು, ಇವರ ಸಾವಿನಿಂದ ಇಡೀ ರೇಣುಕಾ ನಗರದಲ್ಲಿ ಶೋಕದ ಛಾಯೆ ಆವರಿಸಿದೆ.
ನಗರದ ಗೋಪನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಇವರು, ಪರೀಕ್ಷೆ ಮುಗಿದಿದ್ದರಿಂದ ಮನೆಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ, ದೇಹ ತಂಪು ಮಾಡಿಕೊಳ್ಳುವ ಉದ್ದೇಶದಿಂದ ಮನೆಯ ಸಮೀಪವೇ ಇರುವ ನಿರ್ಮಾಣ ಹಂತದ ಆರ್ಎನ್ಎಸ್ (RNS) ಗಾಲ್ಫ್ ಮೈದಾನದ ಹೊಂಡಕ್ಕೆ ಈಜಲು ತೆರಳಿದ್ದರು.
ಮಧ್ಯಾಹ್ನ ಮನೆಯಿಂದ ಹೋದವರು ಸಂಜೆಯಾದರೂ ಬಾರದಿದ್ದಾಗ ಪೋಷಕರು ಆತಂಕಗೊಂಡಿದ್ದರು. ಈ ನಡುವೆ ಹೊಂಡದಲ್ಲಿ ವಿದ್ಯಾರ್ಥಿಗಳು ಮುಳುಗಿರುವುದನ್ನು ಗಮನಿಸಿದ ಅಲ್ಲಿದ್ದ ಕೆಲಸಗಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು.
ಮೃತ ಇಬ್ಬರು ವಿದ್ಯಾರ್ಥಿಗಳಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಹೊಂಡದ ಆಳದ ಅಂದಾಜು ತಿಳಿಯದೆ ನೀರಿಗಿಳಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರ ಶವಗಳನ್ನು ನೋಡಿ ಹೆತ್ತವರು ಹಾಗೂ ಸಂಬಂಧಿಕರು ಹಾಕುತ್ತಿದ್ದ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು.
ಈ ಘಟನೆಯ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯಾದ್ಯಂತ ಬಿಸಿಲು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಕೆರೆ, ಹೊಂಡ ಅಥವಾ ನದಿಗಳ ಬಳಿ ಈಜಲು ಹೋಗುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಪೊಲೀಸರು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬವನ್ನೇ ಶೋಕಸಾಗರದಲ್ಲಿ ಮುಳುಗಿಸುವಂತಾಗಿದೆ.
ವರದಿ :- ಆಂಟೋನಿ ಪತ್ರಕರ್ತ



