ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ: ತಂದೆಯ ಸಣ್ಣ ಮರವಿಗೆ ಎರಡೂವರೆ ವರ್ಷದ ಕಂದಮ್ಮ ಬಲಿ!

ಬೆಂಗಳೂರು: ಮದುವೆ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಕಿರುಚಾಟ, ನಗು ಇರಬೇಕಾದ ಜಾಗದಲ್ಲಿ ಈಗ ಮೌನ ಆವರಿಸಿದೆ. ತಂದೆಯ ಒಂದು ಕ್ಷಣದ ಅಚಾತುರ್ಯಕ್ಕೆ ಎರಡೂವರೆ ವರ್ಷದ ಕಂದಮ್ಮ ಸಂಪ್ಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಣ್ಣಯ್ಯ ಮತ್ತು ಋತು ದಂಪತಿಯ ಪುಟ್ಟ ಮಗ ಚಿರಾಗ್ (2.5 ವರ್ಷ) ಮೃತಪಟ್ಟ ದುರ್ದೈವಿ. ಮನೆಯಲ್ಲಿ ಮದುವೆ ಸಮಾರಂಭವಿದ್ದ ಕಾರಣ ಕುಟುಂಬಸ್ಥರೆಲ್ಲರೂ ಸಿದ್ಧತೆಯಲ್ಲಿ ತೊಡಗಿದ್ದರು. ತಾಯಿ ಮಗನಿಗೆ ಸ್ನಾನ ಮಾಡಿಸಿ ಅಂದವಾಗಿ ತಯಾರು ಮಾಡಿದ್ದರು. ಅದೇ ಸಮಯದಲ್ಲಿ ತಂದೆ ಅಣ್ಣಯ್ಯ ಅವರು ಮನೆಯ ಹೊರಗಡೆ ಕಾರು ತೊಳೆಯುತ್ತಿದ್ದರು.
ಕಾರು ತೊಳೆಯಲು ಸಂಪ್ನಿಂದ ನೀರು ಬಳಸಿದ್ದ ಅಣ್ಣಯ್ಯ, ಕೆಲಸ ಮುಗಿದ ನಂತರ ಆತುರದಲ್ಲಿ ಸಂಪ್ನ ಮುಚ್ಚಳವನ್ನು ಮುಚ್ಚಲು ಮರೆತು ಮನೆ ಒಳಗೆ ಹೋಗಿದ್ದಾರೆ. ಇದೇ ವೇಳೆ ಆಟವಾಡುತ್ತಾ ಹೊರಬಂದ ಪುಟ್ಟ ಚಿರಾಗ್, ತೆರೆದಿದ್ದ ಸಂಪ್ಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಸ್ವಲ್ಪ ಸಮಯದ ನಂತರ ಮಗು ಕಾಣದಿದ್ದಾಗ ಹುಡುಕಾಡಿದ ಪೋಷಕರಿಗೆ ಸಂಪ್ನಲ್ಲಿ ಮಗನ ಮೃತದೇಹ ಕಂಡುಬಂದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಒಂದು ಕ್ಷಣದ ಅಜಾಗರೂಕತೆ ಬದುಕನ್ನೇ ಕಸಿದುಕೊಳ್ಳಬಹುದು. > ಮನೆಯಲ್ಲಿ ಪುಟ್ಟ ಮಕ್ಕಳಿದ್ದಾಗ ನೀರಿನ ಸಂಪ್, ವಿದ್ಯುತ್ ಸಂಪರ್ಕ ಹಾಗೂ ಟೆರೇಸ್ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ. ಸಂಪ್ಗಳಿಗೆ ಯಾವಾಗಲೂ ಸುರಕ್ಷಿತವಾದ ಮತ್ತು ಲಾಕ್ ಮಾಡಬಹುದಾದ ಮುಚ್ಚಳಗಳನ್ನು ಅಳವಡಿಸಿ. ನಿಮ್ಮ ಸಣ್ಣ ನಿರ್ಲಕ್ಷ್ಯ ಅದೆಂತಹ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆಯೇ ಕರುಣಾಜನಕ ಸಾಕ್ಷಿ.



