*ಎಂಡಿಎ ಅಕ್ರಮಗಳ ಅಸಲಿ ಆಟ: ಭ್ರಷ್ಟ ತಹಸೀಲ್ದಾರ್ ಪರ ಪ್ರಾಧಿಕಾರದ ‘ಬ್ಯಾಟಿಂಗ್’, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ!*

ಮೈಸೂರು: ಹೆಸರು ಬದಲಾದರೂ ಗುಣ ಬದಲಾಗಿಲ್ಲವೇ? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈಗ ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ (ಎಂಡಿಎ) ಆಗಿ ಪರಿವರ್ತನೆಗೊಂಡರೂ, ಭ್ರಷ್ಟಾಚಾರದ ಕಳಂಕ ಮಾತ್ರ ಅಳಿಸಿಹೋದಂತೆ ಕಾಣುತ್ತಿಲ್ಲ. ಅಮಾನತ್ತಿನಲ್ಲಿರುವ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ಅವರನ್ನು ರಕ್ಷಿಸಲು ಪ್ರಾಧಿಕಾರ ಮತ್ತು ಅದರ ಕಾನೂನು ಶಾಖೆ ಕಸರತ್ತು ನಡೆಸುತ್ತಿರುವುದು ಇದೀಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ವಿಶೇಷ ತಹಸೀಲ್ದಾರ್ ಆಗಿದ್ದ ಕೆ.ವಿ. ರಾಜಶೇಖರ್ ಅವರು ಗೋಕುಲಂ ಬಡಾವಣೆಯ 3ನೇ ಹಂತದಲ್ಲಿರುವ 30*40 ಅಡಿಯ ಮಾದರಿ ಮನೆಗೆ ಸಂಬಂಧಿಸಿದಂತೆ:
ಪೌತಿಖಾತೆ ವರ್ಗಾವಣೆ ಮತ್ತು ತಿದ್ದುಪಡಿ ಕ್ರಯಪತ್ರ ವಿತರಣೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು.ಈ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಜೂನ್ನಲ್ಲಿ ಇವರನ್ನು ಅಮಾನತು ಮಾಡಲಾಗಿತ್ತು.
ರಾಜಶೇಖರ್ ವಿರುದ್ಧ ದೋಷಾರೋಪಣ ಪಟ್ಟಿ ಮತ್ತು ಧೃಢೀಕೃತ ದಾಖಲೆಗಳನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಆಯುಕ್ತಾಲಯವು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (MDA) ತುರ್ತು ಪತ್ರ ಬರೆದಿತ್ತು. ಆದರೆ, ಪ್ರಾಧಿಕಾರ ಮಾತ್ರ ‘ಡೋಂಟ್ ಕೇರ್’ ಎನ್ನುತ್ತಾ ಭ್ರಷ್ಟ ಅಧಿಕಾರಿಯ ರಕ್ಷಣೆಗೆ ನಿಂತಿದೆ.
ಇದೀಗ ಸರ್ಕಾರ ಮತ್ತೊಂದು ತುರ್ತು ಪತ್ರ (ಸಂಖ್ಯೆ: ನ.ಅ.ಪ್ರಾ/ನಗ್ರಾಯೋ/ಅ(2)/ಮೈಅಪ್ರಾ/2026) ರವಾನಿಸಿದ್ದು, ಈ ಕೆಳಗಿನಂತೆ ಎಚ್ಚರಿಕೆ ನೀಡಿದೆ:
ಅಂತಿಮ ಗಡುವು: 3 ದಿನಗಳ ಒಳಗೆ ಕರಡು ದೋಷಾರೋಪಣೆ ಪಟ್ಟಿ 1-4 ಸಲ್ಲಿಸಬೇಕು.
ಪರಿಣಾಮ: ಒಂದು ವೇಳೆ ದಾಖಲೆ ಸಲ್ಲಿಸಲು ವಿಳಂಬವಾದರೆ, ಪ್ರಾಧಿಕಾರವು ಅಕ್ರಮಗಳನ್ನು ಮುಚ್ಚಿಡುತ್ತಿದೆ ಎಂದು ಸರ್ಕಾರಕ್ಕೆ ನೇರ ವರದಿ ನೀಡಲಾಗುವುದು.
ಹಗರಣಗಳಿಂದ ಬೇಸತ್ತ ಸರ್ಕಾರ ಪ್ರಾಧಿಕಾರಕ್ಕೆ ‘ಮೇಜರ್ ಸರ್ಜರಿ’ ಮಾಡಿದರೂ, ಕೆಳಮಟ್ಟದ ಅಧಿಕಾರಿಗಳು ಇಂದಿಗೂ ಭ್ರಷ್ಟರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಜಿಲ್ಲಾಧಿಕಾರಿಗಳೇ ಎಂಡಿಎ ಅಧ್ಯಕ್ಷರಾಗಿದ್ದಾರೆ. ಆದರೂ ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
*ವರದಿ :- ಆಂಟೋನಿ ಪತ್ರಕರ್ತ*



